ಬಾರ್ಗೆ ಹೋಗಲು ದಾರಿ ಮಾಡಿಕೊಟ್ಟ ಐಆರ್ಬಿ
ಬಾರ್ಗೆ ಹೋಗಲು ದಾರಿ ಮಾಡಿಕೊಟ್ಟ ಐಆರ್ಬಿ
ಐಆರ್ಬಿಯದು ಹೆದ್ದಾರಿ ಗುತ್ತಿಗೆಯೋ… ಬಾರ್ ಪ್ರವೇಶಕ್ಕೆ ಯೋಜನೆಯೋ?
ಐಆರ್ಬಿ ಹೊಸ ಸೇವೆ: ‘ಡ್ರಿಂಕ್ಸ್ ಡೈರೆಕ್ಟ್ ಎಂಟ್ರಿ‘!
ರಾಘು ಕಾಕರಮಠ.
ಅಂಕೋಲಾ : ಚತುಷ್ಪಥ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಐಆರ್ಬಿ ಕಂಪನಿ ಈಗ ಹೆದ್ದಾರಿ ಅಭಿವೃದ್ಧಿಯ ಜೊತೆಗೆ ಬಾರ್ಗೆ ಸಾಗಲು “ವಿಶೇಷ ಸಂಪರ್ಕ ಯೋಜನೆ“ಯನ್ನೂ ಕೈಗೆತ್ತಿಕೊಂಡಿದೆಯೇ ಎಂಬ ಪ್ರಶ್ನೆ ಬಾಳೆಗುಳಿಯಲ್ಲಿ ಕೇಳಿಬರುತ್ತಿದೆ. ಕಾರಣ, ವರದರಾಜ್ ಹೋಟೆಲ್ ಎದುರಿನ ಡಿವೈಡರ್ ತೆರವುಗೊಳಿಸಿ, ವಾಹನಗಳು ನೇರವಾಗಿ ಬಾರ್ ಕಡೆಗೆ ತಿರುಗಲು ಅನುಕೂಲ ಮಾಡಿಕೊಟ್ಟಿರುವ ದೃಶ್ಯ ಸ್ಥಳೀಯರ ಹುಬ್ಬೇರಿಸಿದೆ.

ಈ ಡಿವೈಡರ್ ತೆರವುಗೊಂಡ ಬಳಿಕ ಆ ಜಾಗ ಅಪಘಾತಗಳ ಹಾಟ್ಸ್ಪಾಟ್ ಆಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈಗಾಗಲೇ ಮೂವರು ಬೈಕ್ ಸವಾರರು ಜೀವ ಕಳೆದುಕೊಂಡಿದ್ದು, ಅನೇಕ ಅಪಘಾತಗಳು ಸಂಭವಿಸಿವೆ. ಆದರೂ ಅಪಾಯಕಾರಿ ಮಾರ್ಗವನ್ನು ಮುಚ್ಚುವ ಪ್ರಯತ್ನ ಮಾತ್ರ ಕಾಣುತ್ತಿಲ್ಲ.
ನಾಲ್ಕೇ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಬೆಂಗಾವಲು ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಘಟನೆ ಕೂಡ ಇದೇ ಸ್ಥಳದಲ್ಲಿ ನಡೆದಿತ್ತು. ರಾಜ್ಯದ ಗಮನ ಸೆಳೆದ ಆ ಘಟನೆ ಬಳಿಕವಾದರೂ ಡಿವೈಡರ್ ಮುಚ್ಚಲಾಗಬಹುದು ಎಂದು ಜನರು ನಿರೀಕ್ಷಿಸಿದ್ದರು. ಆದರೆ ಪರಿಸ್ಥಿತಿ ಮಾತ್ರ “ಹೇಗಿದೆಯೋ ಹಾಗೆಯೇ” ಮುಂದುವರಿದಿದೆ.
ಸ್ಥಳೀಯರ ಆರೋಪದಂತೆ, ಈ ತೆರವು ಬಾರ್ಗೆ ಸುಲಭ ಪ್ರವೇಶ ಕಲ್ಪಿಸುತ್ತಿದೆಯೇ ಹೊರತು, ಸಾರ್ವಜನಿಕರ ಸುರಕ್ಷತೆಗೆ ನೆರವಾಗುತ್ತಿಲ್ಲ. ಹೆದ್ದಾರಿ ಸುರಕ್ಷತೆಗಿಂತ ಬಾರ್ ಪ್ರವೇಶವೇ ಮುಖ್ಯವೇ?” ಎಂಬ ಪ್ರಶ್ನೆ ಈಗ ಜನರ ನಡುವೆ ಕೇಳಿಬರುತ್ತಿದೆ.
ಅಪಘಾತಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಮುನ್ನ ಐಆರ್ಬಿ ಈ ಡಿವೈಡರ್ ಅನ್ನು ತಕ್ಷಣ ಮುಚ್ಚಿ, ಹೆದ್ದಾರಿಯ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂಬುದು ಸ್ಥಳೀಯರ ಆಗ್ರಹ. ಇಲ್ಲವಾದರೆ, ಈ “ಶಾರ್ಟ್ಕಟ್” ಇನ್ನಷ್ಟು ಜೀವಗಳಿಗೆ ಲಾಂಗ್ಕಟ್ ಆಗುವ ಆತಂಕ ವ್ಯಕ್ತವಾಗಿದೆ.
